ಪುಷ್ಕರ ಫಿಲ್ಮ್ಸ್ ಹಾಗೂ ಲಾಸ್ಟ್ ಅಂಡ್ ಫೌಂಡ್ ಫಿಲ್ಮ್ಸ್ ಲಾಂಛನದಲ್ಲಿ ತಯಾರಾಗಿರುವ ಚಿತ್ರ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’. ಎಂ ಪುಷ್ಕರ ಮಲ್ಲಿಕಾರ್ಜುನಯ್ಯ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಗಿರೀಶ್ ಕಾಸರವಳ್ಳಿ ಮತ್ತು ಜೇಕಬ್ ವರ್ಗೀಸ್ ಅವರೊಟ್ಟಿಗೆ ಸಹಾಯಕರಾಗಿ ಕೆಲಸ ಮಾಡಿದ್ದ ಹೇಮಂತ್ ರಾವ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಇವತ್ತಿನ ದಿನಗಳಲ್ಲಿ ಅನೇಕರು ಕೌಟುಂಬಿಕ ಸಮಸ್ಯೆಗಳ ನಡುವೆ ಒಟ್ಟಿಗಿದ್ದೂ ಕಳೆದುಹೋದವರಂತೆ ಬದುಕುತ್ತಿರುತ್ತಾರೆ. ಆದರೆ ಮಾನಸಿಕ ಸಮಸ್ಯೆಗೆ ಒಳಗಾದ ವ್ಯಕ್ತಿಯೊಬ್ಬ ಗೊತ್ತೂ ಗುರಿ ಇಲ್ಲದಂತೆ ತಪ್ಪಿಸಿಕೊಳ್ಳುವುದು, ತನ್ನ ತಂದೆಯೊಂದಿಗೆ ಯಾವತ್ತಿಗೂ ಅಂತರ ಕಾಪಾಡಿಕೊಂಡುಬಂದ ಮಗ ಅದೇ ಅಪ್ಪ ಕಾಣೆಯಾದಾಗ ದಿಕ್ಕು ಕಳೆದುಕೊಂಡಂತೆ ಒದ್ದಾಡುವುದು. ಈ ಎಲ್ಲ ಸೂಕ್ಷ್ಮಗಳನ್ನೇ ಕಥಾವಸ್ತುವಾಗಿಸಿ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರವನ್ನು ನಿರ್ಮಿಸಲಾಗಿದೆ.
ನಾಳೆಯಿಂದ ರಾಜ್ಯಾದ್ಯಂತ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ತೆರೆಗೆ ಬರುತ್ತಿದೆ. ಕನ್ನಡ ಚಿತ್ರ ರಂಗದ ಮೇರು ಪ್ರತಿಭೆ ಅನಂತ್ ನಾಗ್, ರಕ್ಷಿತ್ ಶೆಟ್ಟಿ ಅವರು ಅಪ್ಪ ಹಾಗೂ ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ಶ್ರುತಿ ಹರಿಹರನ್, ಅಚ್ಯುತ್ ಕುಮಾರ್, ವಸಿಷ್ಠ ಎನ್ ಸಿಂಹ, ರವಿಕಿರಣ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇದೇ ಮೊದಲ ಬಾರಿಗೆ ಸಂಗೀತ ನೀಡಿರುವ ಚರಣ್ ರಾಜ್ ಅವರ ರಾಗ ಸಂಯೋಜನೆಯಲ್ಲಿ ಒಂಭತ್ತು ಹಾಡುಗಳಿದ್ದು, ಈ ಹಾಡುಗಳನ್ನು ಹಿನ್ನಲೆಯಲ್ಲಿ ಮಾತ್ರ ಬಳಸಿಕೊಳ್ಳಲಾಗಿದೆ. ನಂದಕಿಶೋರ್ ಛಾಯಾಗ್ರಹಣ, ಶ್ರೀಕಾಂತ್ ಶ್ರಾಫ್ ಸಂಕಲನ ಒದಗಿಸಿದ್ದಾರೆ. ಜಯಣ್ಣ ಫಿಲ್ಮ್ಸ್ ಈ ಚಿತ್ರದ ವಿತರಣೆಯ ಹಕ್ಕು ಪಡೆದಿದ್ದಾರೆ.